ಕವನಗಳ ಗೊಂಚಲು

ಶನಿವಾರ, ನವೆಂಬರ್ 15, 2008

ಈ ನಡುವೆ

ಈ ನಡುವೆ ಕವಿತೆ ಹುಟ್ಟುತ್ತಿಲ್ಲ,
ಏಕೆಂದರೆ ಬದುಕು ಕಾದಂಬರಿ ಆಗುತ್ತಿದೆ !!

ಗುರುವಾರ, ಸೆಪ್ಟೆಂಬರ್ 20, 2007

ಮೊದಲ ಒಲವಿನ ಚೆಲುವು

ಮೊದಲ ಒಲವಿನ ಚೆಲುವೇ
ಹಾಗೆ.

ನಿಲುಕದ ನಭದ ನಕ್ಷತ್ರದ
ನಗುವಿನಂತೆ.

ಹೊನ್ನಾಗಿ ಹೊಳೆವ ಹಳೆಯ
ಹಾಡಿನಂತೆ.

ಮನದ ಬಾಗಿಲು ದಾಟಿ ಒಳ ಸುಳಿವ
ನೆನಪಿನಂತೆ.

ಅವಳಿಲ್ಲ !!

ಅವಳಿರುವಾಗ
ನನ್ನಲ್ಲಿ ಕವಿತೆಗಳ
ಒಡವೆ ಇರಲಿಲ್ಲ.

ಎದೆಯಿಂದ ಕವಿತೆಗಳನೆಲ್ಲ
ಬಸಿದು ತಂದಿರುವೆ.

ಕವಿತೆಗಳ ಒಡವೆ ತೋರಿಸಬೇಕೆಂದರೆ
ಅವಳಿಲ್ಲ !!

ನೆನಪುಗಳ ಸೆಳವು.

ಮನದ ಮೊಂಬತ್ಟಿಯ ಮೇಲೆ
ಮಿಂಚಿನ ಮಿನುಗು.

ಎದೆಯ ಹಾದಿ ಗುಂಟ
ನೆನಪುಗಳ ಸೆಳವು.

ಕಣ್ಣ ಹನಿಗಳಿಗೀಗ
ಬಯಲು ಸೀಮೆಯ ಬರ.

ಕಡಲ ಕಿನಾರೆಗಳ ನಡುವೆ
ಅಲೆಗಳ ಪರದೆ !!

ನೆನಪುಗಳು

ಹನಿಗೂಡಿ ಕಡಲಾಗದೆ
ಮನದ ನೆಲಕೆ ಹಸಿರು ತಂದ ವು.

ಎಲೆ ಮೇಲೆ ಕೂತು ಇಬ್ಬನಿ ಯಾಗದೆ
ಮನದ ಕೊರಳಿಗೆ ಮಾಲೆಯ ಹೊಳಪು ತಂದ ವು.

ರಾತ್ರಿಯೆಲ್ಲ ತಣ್ಣಗೆ ಹೆಪ್ಪು ಗಟ್ಟದೆ
ಮನದ ಹಾಲಿನ ಮೇಲೆ ಕೆನೆ ಗಟ್ಟಿ ನಿಂತ ವು.

ಮಾತು ಗಳಂತೆ ಮರೆತು ಕರಗದೆ
ಮನದ ಎದೆಯ ಮೇಲೆ ಕವಿತೆಯಂತೆ ನಿಂತ ವು.

ಕಣ್ಣೊಳಗೆ ಅಡಗಿ

ಕೆನ್ನೆಗಿಳಿದು ಕವಲಾಗುವದನು
ನಿಲ್ಲಿಸಿವೆ ಕಣ್ಣ ಹನಿಗಳು.

ನೋವು ಮರೆಸಲು
ಕಣ್ಣೊಳಗೆ ಅಡಗಿ ಕೂತಿವೆ !!

ಕವಿತೆ ಎಂಬ ಮನೆ

'ಹೇಗೆ ಬರೆಯುವೆ ಕವನ '?
ಕಣ್ಣರಳಿಸಿ ಕೇಳಿದಳು ನನ್ನ ಹುಡುಗಿ.

'ಗೊತ್ತಿಲ್ಲ ನಲ್ಲೇ
ಅಕ್ಷರಗಳ ಆಟ ಆಡಲು ಕೂಡುವೆ,
ಕವಿತೆ ಎಂಬ ಮನೆ ಸಿದ್ದ'
ಅಂದೆ.

ಹದವಾಗಿದೆ ಬೆರಳು !!

ಸಾಗರದಲೆಗಳ ಹೊಡೆತಕೆ
ಮಿದುವಾಗಿದೆ ಮರಳು.

ಕವಿತೆಯ ಅಲೆಗಳ ರಭಸಕೆ
ಹದವಾಗಿದೆ ಬೆರಳು !!

ಸಂತಸ ಗಳ ಮೆರವಣಿಗೆ

ನಿನ್ನೆಯ ತನಕ
ನೋವುಗಳ ಮೌನರಾಗವಿತ್ಟು.

ಇಂದು ಮಾತ್ರ
ಸಂತಸ ಗಳ ಮೆರವಣಿಗೆ ಹೊರಟಿದೆ !!

ನೆರಳು

ನೆರಳು

ನನ್ನೊಂದಿಗಿದ್ದೂ
ನನ್ನದಾಗದ
ಮೋಹಕ
ಮಾಯೆ !!

ನಿರಾಳ

ನನ್ನೆಲ್ಲ ಭಾವಗಳು
ಬಸಿರು ತುಂಬಿದ
ಕಾರ್ಮೋಡ ಗಳಾಗಿದ್ದವು.

ಅಕ್ಷರದ ಹನಿಯಾಗಿ
ಕವಿತೆಗಳ ಮಳೆ ಸುರಿಸಿ
ನಿರಾಳ ವಾದವು.

ಪ್ರೀತಿಯ ಚಿಗುರು

ಮುಂಗಾರು ಮಳೆಗೆ
ನೋವಿನ ಮರ ಉರುಳಿದರೆ,
ಬದುಕಿನಲಿ ಪ್ರೀತಿಯ ಚಿಗುರು
ಹುಟ್ಟಿದೆ !!

ಒಲವಿನ ಒರತೆ

ಮುಖದ ಮೇಲೆ ಮೌನ ಮೆರೆದು
ಮಾತು ಮರೆಸಿದೆ.

ಒಡಲ ಒಲವಿನ ಒರತೆ ಯನ್ನು
ಕಣ್ಣು ಹೇಳಿ ಮುಗಿಸಿವೆ.

ಕನಸುಗಳ ಚೀಲ

ಕನಸುಗಳ ಚೀಲ ಹೊತ್ತು ಹೊರಟಿತ್ತು
ಮನಸು.

ಚೀಲವೇಕೋ ಹಗುರವಾಗಿ,
ಕನಸುಗಳು ಸೋರೀ ಹೋದವೆಂದು
ದಿಗಿಲು ಗೊಂಡಿತು ಮನಸು.

ತಿರುಗಿ ನೋಡಿದರೆ ನನಸುಗಳ
ರಂಗೋಲಿ ಬಿಡಿಸಿತ್ತು
ಬದುಕು.

ಎಸ್ ಎಮ್ ಎಸ್ ಕಳಿಸುತ್ತೇನೆ ನಾನು

ಎಸ್ ಎಮ್ ಎಸ್
ಕಳಿಸುತ್ತೇನೆ ನಾನು
ಅವರಿರವರ ತಲೆ ತಿಂದು
ಕಾಲಹರಣ ಮಾಡಬಹುದೆಂಬ
ಭ್ರಮೆಯಿಂದಲ್ಲ ,

ಇರುವಷ್ಟು ಹೊತ್ತು,
ನನ್ನ ನೆನಪು ಅವರಿಗೆ,
ಅವರ ನೆನಪು
ನನಗೆ ಬರುತ್ತಿರಲಿ ಎಂಬ
ಒಂದೇ ಒಂದು ಆಸೆಯಿಂದ !!

--ಜೀ ಎಸ್ ಎಸ್ ಅವರ ಕ್ಷಮೆ ಕೋರಿ !!

ಬುಧವಾರ, ಸೆಪ್ಟೆಂಬರ್ 19, 2007

ಅವನು

ಅವನು
ಮಾತಿನ ಮೋಡಿಯಲಿ
ಮನವ ಗೆದ್ದು
ಮರುಳು ಮಾಡಿದ ಮಾಂತ್ರಿಕ.

ಅವನು
ಎದೆಯ ವೀಣೆಯ ಮೀಟೀ
ಹಾಡುಗಳ ಹೊನಲಿನ ಮೇಲೆ
ಪಯಣಿಸಲು ಕರೆದ ಗಾಯಕ.

ಅವನು
ಅಕ್ಶರಗಳ ಪೋಣಿಸಿ ,
ಕವಿತೆಗಳ ಕಟ್ಟಿ,
ಬದುಕನ್ನು
ದೃಶ್ಯ ಕಾವ್ಯ ವಾಗಿಸಿದ ಕವಿ.

ಅವನು
ಬದುಕಿನ ಬಿಂಬಗಳನೆಲ್ಲ
ಬಿಡಿ ಬಿಡಿ ಯಾಗಿ ಬಿಡಿಸಿಟ್ಟ ಕಲಾವಿದ.

ಅವನು
ಮಾತಿನಲಿ ಮುಳುಗಿಸಿ ,
ಹಾಡುಗಳ ಹರಿಸಿ
ಕವಿತೆಗಳ ಕಟ್ಟಿ
ಚಿತ್ರಗಳ ಬಿಡಿಸಿ
ಬದುಕಿನ ದಡವ ಮುಟ್ಟಿಸಿದ
ಅಂಬಿಗ !!

ಮನಸು ಗೂಗಲ್ ಸರ್ಚ್ ಎಂಜಿನ್ ನಂತೆ !!

ಮನಸು
ಗೂಗಲ್ ಸರ್ಚ್ ಎಂಜಿನ್ ನಂತೆ !!

ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!

ನಿರಿಗೆಗಳಂತೆ

ನೀರೊಳಗಿನ ಕಲ್ಲ ಮೇಲೆ
ಕಂಡವು ಗೀರುಗಳು.

ಮಾಗಿದ ಮುಖದ ಮೇಲೆ
ಇರುವ ನಿರಿಗೆಗಳಂತೆ !!

ನಿನ್ನ ನೆನಪು

ನಿನ್ನ ನೆನಪು
ಚಳಿಯ ಇರುಳಿನಲಿ
ಹೆಪ್ಪುಗಟ್ಟಿದ ಹಿಮ.

ನಿನ್ನ ನೆನಪು
ಮುಂಜಾವಿನ ಎಳೆಬಿಸಿಲಲಿ
ಮುಗಿಲಿನ ಎದೆ ಸೀಳಿ ಬರುವ
ಹೊನ್ನ ಕಿರಣ.

ನಿನ್ನ ನೆನಪು
ಮದ್ಯಾಹ್ನದ ಬಿರುಬಿಸಿಲಿನಲಿ
ಗುಲ್ ಮೊಹರಿನ ಸಂಬ್ರಮ.

ನಿನ್ನ ನೆನಪು
ಸಂಜೆಯ ತಂಪಿನಲಿ ಸುಮ್ಮನೆ
ಒಮ್ಮೆ ಬಂದು ,ಮನಸು ತಾಕುವ ತಂಗಾಳಿ.

ನಿನ್ನ ನೆನಪು
ದಿನವಿಡೀ ಕಾಡುವ,ಉಸಿರಿನಲಿ,ನೀರಿನಲಿ,
ಮನದಲಿ,ಎಲ್ಲೆಲ್ಲೂ ಕಾಡುವ
ಸುಂದರ ಗಜಲು.

ನಿನ್ನ ಪ್ರೀತಿ

ನಿನ್ನ ಪ್ರೀತಿ,
ಕತ್ತಲ ಕಡಲ ಮೇಲೆ
ಬೆಳಗಿದ ಹಣತೆ.

ನಿನ್ನ ಪ್ರೀತಿ,
ಬದುಕಿನ ಬೇಗೆಯ ಮೇಲೆ
ಸುರಿದ ಮಳೆ.

ನಿನ್ನ ಪ್ರೀತಿ,
ಎದೆಯ ಮೌನದೊಳಗೆ
ಹೆಜ್ಜೆ ಹಾಕಿದ ಗಾನ.

ನಿನ್ನ ಪ್ರೀತಿ,
ಬಾಳ ಬರಡಿನ ಮೇಲೆ
ಹರಿದ ತೊರೆ.

ನಿನ್ನ ಪ್ರೀತಿ,
ಹಗಲು ಹಾಡುಗಳ ನಡುವೆ
ರಾತ್ರಿ ಮೌನ ರಾಗ.

ಕಲ್ಲೆಂಬ ಜೀವ !!

ನೋವೆಂಬ ಜಲಪಾತಕ್ಕೆ
ಮೈಯೊಡ್ದಿ,

ಬದುಕು ಸವೆಸಿತು
ಕಲ್ಲೆಂಬ ಜೀವ !!

ಮಂಗಳವಾರ, ಸೆಪ್ಟೆಂಬರ್ 18, 2007

ಬರಿದು ನೀಲಿ ಬಾನಿದೆ !!

ಕವಿತೆ ಬರೆಸಿಕೊಂಡ ಪುಟಕೆ
ಮಳೆ ತರಿಸಿಕೊಂಡ ಸುಖವಿದೆ.

ಕವಿಯ ಎದೆಯಲಿ ಮೋಡ ವಿಲ್ಲದ
ಬರಿದು ನೀಲಿ ಬಾನಿದೆ !!

ಒಲಿದು ಬಂದವಳು ಕಾವ್ಯ !!

ನಾನು ಬಯಸಿದರೂ
ನನ್ನ ಬದುಕಿಗೆ
ದಕ್ಕದೆ ತಪ್ಪಿಸಿಕೊಂಡವಳು
ಸಂಗೀತಾ

ನನ್ನ ವರುಷ ಗಟ್ಟಲೆಕಾಡಿಸಿ,
ಕೊನೆಗೂ ಒಲಿದು ಬಂದವಳು
ಕಾವ್ಯ !!
I couldnt learn music,
but i could pen down poems !!

ಅವರು

ಪ್ರೀತಿ ಎಂದರೆ
ಮನ ಮನಗಳ ನಡುವಿನ
ಪಿಸುಮಾತು ಎಂದವರು.

ನನ್ನ ನಗು ವಿಗಿಂತ
ನಿನ್ನ ಮನಸು
ಚಂದ ಎಂದವರು.

ನಿನ್ನ ಮಾತು ಕೇಳುತ್ತಲೇ
ಇರಬೇಕು ಎಂದು
ಮಾತು ಕೇಳದೆ ಹೊರಟು
ಹೋದವರು.

ಮುಂಜಾನೆ ಮುನಿದು
ಸಂಜೆ ಮರೆವ
ಮಗುವಿನಂತವರು.

ಹತ್ತಿರವಾದೆ ಎನ್ನುತ್ತಲೆ
ಮುನಿದು ದೂರ ಹೋದವರು,

ಎಲ್ಲೇ ಇರಲಿ ಅವರು
ಸುಖವಾಗಿರಲಿ ಅವರು,
ಮಗುವಿನಂತೆಯೇ ಇರಲಿ ಅವರು !!

ಮನದ ಮೊಬೈಲು !

ನಮ್ಮಿಬ್ಬರ ಮನದ ಮೊಬೈಲುಗಳ ನಡುವೆ
ಸ್ವಿಚ್ದ್ ಆಫ್,ನಾಟ್ ರೀಚಬಲ್ ಗಳ ತೊಂದರೆ ಇಲ್ಲ !

ನಾನು ಅವಳ ನೆನೆದರೆ
ಅವಳ ಮನದಲಿ ರಿಂಗನ

ಅವಳು ನನ್ನ ನೆನೆದರೆ
ನನ್ನ ಮನದಲಿ ರಿಂಗನ !!

ಕಾಡಿಗೆಯಂತೆ

ಒಲವ ಸೂಸುವ ಕಣ್ಣ ಕೆಳಗೆ
ಕಪ್ಪೇಕೆ ಇನಿಯ ?

ಮನೆಯ ಬೆಳಗುವ ದೀಪದಡಿಯ
ಕಾಡಿಗೆಯಂತೆ !!

ಸೋಮವಾರ, ಸೆಪ್ಟೆಂಬರ್ 17, 2007

ಬೆವರ ಮುತ್ತಿನ ಸಾಲು

ಮುತ್ತುಗಳಿಂದ ಅಲಂಕರಿಸಬೇಕೆನಿಸಿತು ನನಗೆ
ಅವಳ ಮೊಗದ ಚೆಲುವನು.

ನನ್ನ ತಬ್ಬಿ ನಾಚಿ ನೀರಾದಳು ಹುಡುಗಿ ,

ಅವಳ ಹಣೆಯ ಮೇಲೀಗ
ಬೆವರ ಮುತ್ತಿನ ಸಾಲು !

ಯೋಜನೆ

ಕತ್ತಲು ಮೌನಗಳೆರಡು
ಕೂಡಿ ಅಂದುಕೊಂಡಿವೆ.

ನಾಳೆಯ ಬೆಳಕಿನಲಿ
ಮಾತಿನ ಮಹಲು
ಕಟ್ಟಬೇಕೆಂದು !!

ಅಕ್ಷರವೇ ಪ್ರೀತಿ ನನಗೆ

ಸಂಖ್ಯೆ ಗಿಂತ
ಅಕ್ಷರವೇ ಪ್ರೀತಿ ನನಗೆ.

ಸಂಖ್ಯೆ ,
ವಾಸ್ತವವ ಘೋಷಿಸಿ ದಿಗಿಲುಗೊಳಿಸಿದರೆ,

ಅಕ್ಷರ ಸನಿಹ ಕರೆದು ಪ್ರೀತಿ ತೋರಿದೆ !

I Prefer Arts to Commerce !!

ಬದುಕು

ಬದುಕು,
ಅರೆತೆರೆದ ಕಣ್ಣು,
ಹೊಯ್ದಾಡುವ ದೀಪ,
ಗಾಳಿಗೆ ಸಿಕ್ಕ ಪುಸ್ತಕದ ಪುಟ !


ಬದುಕು,
ಮರುಭೂಮಿ ಮೇಲೆ ಚಿಗುರಿನ ಮೆರುಗು,
ಕಡಲ ನಡುವಿನ ಹಡಗು,
ಕಂಡೂ ಕಾಣದ ಕತ್ತಲ ದಂಡೆ !


ಬದುಕು,
ಹಳತಾಗಿ ತೆಗೆದಿಟ್ಟ ಕನ್ನಡಕ,
ಬಿಗಿಯಾಗಿ ಬಿಚಿತ್ತ ಉಂಗುರ,
ಕಣ್ಣಿಗೆ ಕಾಣದೆ ಉಳಿದ ಬಂಗಾರದಂತ ಪುಸ್ತಕ !


ಬದುಕು,
ತುಟಿಯ ತುದಿಯ ಹಾಡು,
ಅರ್ಥವಾಗದ ಕವಿತೆ,
ವೃತ್ತವಾಗಲು ಹೋಗಿ ಅರ್ಧ ಚಂದ್ರ ವಾದ ರೀತಿ !!

ಪ್ರೀತಿಯ ಸುಳಿ

ನೀ ಕೊಟ್ಟ ಉಂಗುರದ ಕಲೆ ಹಾಗೆ ಇದೆ,
ನನ್ನ ಬೆರಳ ಸುತ್ತ,

ನಮ್ಮ ಪ್ರೀತಿಯ ಸುಳಿಯ ನೆನಪಿನ ಕುರುಹಾಗಿ !!

ಮಲಗುವ ಮುನ್ನ

ಮಲಗುವ ಮುನ್ನ ನನ್ನ
ಎಳೆದುಕೊ ನಿನ್ನ ಕಣ್ಣಿನೊಳಗೆ,

ಚಾದರಿನ ಹಂಗಿಲ್ಲದೆ ಮಲಗಿರುವೆ
ರಾತ್ರಿಯೆಲ್ಲ ಬೆಚ್ಚಗೆ ನಿನ್ನ ಕಣ್ಣಿನೊಳಗೆ !!

ಮೊಂಬತ್ತಿ

ಉರಿವ ದೀಪಕೆ
ಇಂಧನವ ಸುರಿದು
ಸೊರಗಿ ಕರಗಿತು ಮೊಂಬತ್ತಿ .


ಕವಿದ ಕತ್ತಲ ಕೆಡವಿ
ಬೆಳಕ ಬರುವಿಗೆ
ನೆರವಾದ ತೃಪ್ತಿ !!

ಕವಿ ಮನಸು

ಮೊಗೆದರೆ ಮುಗಿಯದ,
ಬತ್ತಿ ಬರಿದಾಗದ
ನಿರಂತರ ಒರತೆ
ನನ್ನ ಕವಿ ಮನಸು !

ಸೂಜಿ

ಸೂಜಿ ಹಿಡಿದು
ಕಸೂತಿ ಹಾಕ ಹೊರಟರೆ,

ಸೂಜಿ ಬೆರಳಿಗೆ ತಗುಲಿ

ಬಿಳಿ ಮನಸಿನ ತುಂಬಾ
ಕೆಂಪು ಬಣ್ಣದ ನೋವು !

ಕನಸು ಮುತ್ತಾದಾಗ

ಇರುಳಿನಲಿ
ಕಣ್ಣರೆಪ್ಪೆಗಳೆರಡು
ಕನಸುಗಳ ಕಾವಲು ಕಾದವು.


ಬೆಳಕು ಹರಿವ ಹೊತ್ತಿಗೆ
ಕನಸುಗಳು ಮುತ್ತುಗಳಾಗಿ ಹೊಳೆದು
ಕಣ್ಣಿಂದ ಉರುಳಿದವು !!

ಪ್ರೇಮಿಯ ಮನದ ಹವಾಮಾನ ವರದಿ

ಕಣ್ಣಲ್ಲಿ ಮೋಡ ಕವಿದ ವಾತಾವರಣ ,
ಎದೆಯಲ್ಲಿ ಒಣ ಹವೆ,
ಸಂಜೆ ಹೊತ್ತಿಗೆ ಬಿರುಗಾಳಿ ,ಮಳೆ ಸಂಭವ ,
ಮನಸೆಂಬ ಮೀನುಗಾರನಿಗೆ
ಪ್ರೀತಿ ಸಾಗರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ !!

ಮನದ ಮನೆ

ಕುಸಿದು ಬಿದ್ದ
ಮನದ ಮನೆಯ
ಮತ್ತೆ ಕಟ್ಟಬೇಕಿದೆ.

ಬದುಕು ಕಟ್ಟುವ
ನೆಪದಲಿ
ಕವಿತೆ ಕಟ್ಟಬೇಕಿದೆ !!

ಹಿಡಿ ಮಣ್ಣು ಹಿಡಿದು

ಹಿಡಿ ಮಣ್ಣು ಹಿಡಿದು ನೆನಪುಗಳ
ಮುಚ್ಚಿ ಹಾಕ ಹೊರಡುವೆ ನಾನು .

ಅರಿವಿಲ್ಲದಂತೆ ನೆನಪಿನ ಸಸಿಗೆ
ಮಡಿ ಕಟ್ಟುವೆ ನಾನು !!

ನಿನ್ನ ಮುರುತಿ

ನೀ ನಡೆದ ನೆಲದ ಮಣ್ಣಲಿ
ಮುರುತಿಯ ಮಾಡಿರುವೆ.

ನೀನಿರದ ಹೊತ್ತಿನಲೂ
ನಿನ್ನ ಬಳಿ ಇರಬಹುದೆಂದು !!

ನಾನು ಕವಿಯಲ್ಲ,

ನನ್ನೆಲ್ಲ ಕವಿತೆಗಳು
ಅವಳ ಕಣ್ಣ ಕಡಲಲ್ಲಿವೆ.

ನಾನು ಕವಿಯಲ್ಲ,

ಮುತ್ತುಗಳ ಹೆಕ್ಕಿ ತರುವ
ಈಜುಗಾರ ಅಷ್ಟೇ !!

ಬೆಳಕಿರದ ಸೂರ್ಯರಂತೆ !!

ಅವಳ ಕಾಣದ
ಕನ್ನಡಿಯ ಮೇಲೆ
ಮುಸುಕು ಬಿದ್ದಿದೆ.

ಕನ್ನಡಿಯ ಅಂಚಿಗೆಲ್ಲ
ಅವಳು ಬಿಟ್ಟು ಹೋದ ಬಿಂಧಿ ಸಾಲು
ಹಾಗೆ ಇದೆ.

ಬೆಳಕಿರದ ಸೂರ್ಯರಂತೆ !!